Showing posts with label ವಚನಗಳು/Vachanas. Show all posts
Showing posts with label ವಚನಗಳು/Vachanas. Show all posts

Sunday, September 18, 2011

Nudigalu - ನುಡಿಗಳು

ನುಡಿಗಳು:


ಉರಿವ ಕೆಂಡದ ಮೇಲೆ ತೃಣವ ತಂದಿರಿಸಿದರೆ
ಆ ತೃಣವನಾ ಕೆಂಡ ನುಂಗಿದಂತೆ,
ಗುರುಚರಣರ ಮೇಲೆ ತನುವೆಂಬ ತೃಣವ ತಂದಿರಿಸಿದರೆ
ಆತನ ಸರ್ವಾಂಗವೆಲ್ಲ ಲಿಂಗ ಕಾಣಾ ರಾಮನಾಥ!

Sunday, May 8, 2011

ವಚನಗಳು:


ಕರಸ್ಥಲವೆಂಬ ದಿವ್ಯ ವಿಭೂತಿಯೊಳಗೆ
ಮಹಾಘನಲಿಂಗ ನಿಕ್ಷೇಪವಾಗಿದೆ
ಈ ದಿವ್ಯ ನಿಕ್ಷೇಪವನಾರಾಧಿಸುವಡೆ
ಅಂಜನಸಿದ್ದಿ ಇಲ್ಲವೆ ಸಾಧಿಸಬಾರದು
ಲಿಪಿ ಇಲ್ಲದ ತೆಗೆವರಸದವಳ
ಆ ಲಿಪಿಯ ಪ್ರಮಾಣದ ಷಟ್ ತತ್ವದ ಮೇಲೆ ನಿಶ್ಚಯಿಸಿ
ಆ ನಿಶ್ಚಯದೊಳಗೆ ಈ ನಿಕ್ಷೇಪಕರ್ತೃವಿನ
ಹೆಸರ ತಿಳಿಯಲೋದುವನ್ನಬರ
ಆತ ನಮ್ಮ ಹೆತ್ತಯ್ಯನೆಂಬ ಹೆಸರೊಂದಿತ್ತು
ಆ ಓದಿಕೆಯ ಕಡೆಯಕ್ಕರದೊಳಗೆ
ಅಂಜನಸಿದ್ದಿಯ ಹೇಳಿತ್ತು
ಅದಾವ ಪರಿಕ್ರಮದಂಜನವೆಂದೊಡೆ
ಅದು ನಮ್ಮ ಹೆತ್ತಯ್ಯ ಜಗದ್ವಿಲಾಸ
ತದರ್ಥವಾಗಿ ತನ್ನ ಆ ಮೂಲಶಕ್ತಿ ಸಂಭೂತವಾದಂದು!
ರಾಮನಾಥ

Sunday, January 9, 2011

ವಚನಗಳು - Vachanas,

ಮುಕ್ಕುವರು ಭಂಗಿಯ ಸಕ್ಕರೆ ಇರಲ್ಕೆ
ಸ್ವಸ್ತ್ರೀ ಇದ್ದಂತೆ ಪರಸ್ತ್ರೀಯರಿಗೆ ಅಳುಪುವರು
ಸತ್ತ ನಾಯ ಭಕ್ಷಿಸುವ ಹಡಕಿಗರನೇನೆಂಬೆನಯ್ಯ ರಾಮನಾಥ ?

ಇತ್ತ ಬಾ ಎನ್ನದವನ, ಹತ್ತೆ ಹೊದ್ದಲು ಬೇಡ
ಇತ್ತ ಬಾ ಎಂಬ ಸದ್ಭಕ್ತನ ಮನೆಯ ಬಾಗಿಲು
ಹತ್ತಿಪ್ಪೆ ಕಾಣಾ ರಾಮನಾಥ |

ಭಕ್ತರ ಮಠವೆಂದು ಭಕ್ತ ಹೋದಡೆ
ಆ ಭಕ್ತ ಭಕ್ತಂಗೆ ಅಡಿ ಇಟ್ಟು ಇದಿರೆದ್ದು ನಡೆದು
ಹೊಡೆಗೆಡೆದು ಒಡಗೊಂದು ಬಂದು
ವಿಭೂತಿ ವೀಳೆಯವನಿಕ್ಕಿ ಪಾದಾರ್ಚನೆಯ ಮಾಡಿ
ಸಮಯವನರಿತು ಲಿಂಗಾರ್ಚನೆಯ ಮಾಡಿಸಿ
ಒಕ್ಕುದ ಕೊಂಡು ಓಲಾಡುತಿಪ್ಪುದೆ ಭಕ್ತಿ
ಹೀಗಲ್ಲದೆ ಬೆಬ್ಬನೆ ಬೆರೆತು, ಬಿಬ್ಬನೆ ಬೀಗಿ
ಅಹಂಕಾರಿಭರಿತನಾಗಿಪ್ಪವನ ಮನೆಯ
ಲಿಂಗಸನುಮತರು ಹೊಗರು ಕಾಣಾ ರಾಮನಾಥ !

ಗುರು ನಿರೂಪವ ಮಾಡರು
ಪರವಧುವ ನೆರವರು, ಪರಧನವನಳುಪುವರು
ಗುರುವಿಲ್ಲವವರಿಗೆ; ಪರವಿಲ್ಲವವರಿಗೆ,
ಇಂತಪ್ಪ ನರಕಿಗಳನೆನಗೊಮ್ಮೆ ತೋರದಿರಾ ರಾಮನಾಥ !

ಒಡೆಯರನೊಡಗೊಡು ಬಂದು
ಕೈಗಡಿಗೆಯ ನೀರ ಕೈಯಲ್ಲಿ ಕೊಟ್ಟು
ಒಡೆಯರೇ ಕಾಲ ತೊಳಕೋ ಎಂಬವರ
ಮನೆಗೆ ಅಡಿ ಇಡಲಾಗದಯ್ಯ ಮೃಡಶರಣರು!
ಒಡಲಿಚ್ಛೆಗೆ ಬಡಮನವ ಮಾಡಿ,
ಹೊಕ್ಕುಂಬವರ ಎನಗೊಮ್ಮೆ ತೋರದಿರಾ ರಾಮನಾಥ !

ಅಡಗ ತಿಂಬರು ಕಣಕದಡಿಗೆ ಇರಲ್ಕೆ
ಸುರೆಯ ಕುಡಿವರು ಹಾಲಿರಲ್ಕೆ

Tuesday, June 15, 2010

ವಚನಗಳು/Vachanas,


ಕರಸ್ಥಲದ ಜ್ಯೋತಿಯದು,ಕರುವಿಟ್ಟೆರದವದು
ಅದರ ನೆಲೆಯ ತಿಳಿದರೆ ನಿಜಾನಂದವಿಹುದು
ಹೊಲಬುದೋರದಿಹ ನಿಸ್ಸೀಮನ
ಹೊಲಬನರಿದು ಕೂಡಿದಾತನ ಮೃಡನು ಕಾಣಾ ರಾಮನಾಥ |

ಅಡಗನೊಳಗೆ ಹಾಲು ಅಡಗಿಪ್ಪ ಭೇದವನು
ಹಾಲೊಳಗೆ ತುಪ್ಪದ ಕಂಪು ಅಡಗಿಪ್ಪ ಪರಿಯನು
ಎಲೆ ಮೃಡನೆ, ನೀನು ಪ್ರಾಣಪ್ರಕೃತಿಯೊಳಡಗಿಹ ಭೇದವನು
ಲೋಕದ ಜಡರೆತ್ತ ಬಲ್ಲ ರೈ ರಾಮನಾಥ |

ಮಾಡಿದ ಕರ್ಮವ ನೋಡಯ್ಯ!
ಎನ್ನ ಮನದಣಿವನ್ನಕ್ಕ ಬೇಡೆನ್ನನು, ಮಾರ್ಕೊಳ್ಳೆನ್ನನು
ಮೇಲೆ ರೂಢಿಗೀಶ್ವರನ ಕೂಡುವೆನು
ನೀರಡಿಸಿದವನಂತೆ ರಾಮನಾಥ |

ಸರ್ಪನು ಕೂರ್ಮನು ದಿಕ್ಕರಿಗಳೆಂಟು
ಭೂಮಿಯ ಹೊತ್ತಿಹರೆಂಬುದು ಅಹರ್ನಿಶ
ಹೊತ್ತಿಪ್ಪವರಿಗೆ ಅತ್ತಲಾಧಾರವೇನು, ಇತ್ತಲಾಧಾರವೇನು?
ಉತ್ತರಗೊಡುವವರಿಗೆ ಇಕ್ಕುವೆ ಮುಂಡಿಗೆಯ
ಎತ್ತುವರುಳ್ಳರೆ ತೋರಿರೈ ರಾಮನಾಥನಲಿ |

ಗಂಡನುಳ್ಳಮ್ಮನ ಗೌರಿ ಎಂದು ಕಂಡಡೆ,
ಭೂಮಂಡಲಕ್ಕೆ ಅರಸಾಗಿ ಪುಟ್ಟುವನಾತನು
ಗಂಡನ್ನುಳ್ಳಮ್ಮನ ಒಡೆವೆರೆದಾತೆ
ನರಕದಲ್ಲಿ ದಿಂಡುಗೆಡೆದಿಪ್ಪನೈ ರಾಮನಾಥ ?

Thursday, January 31, 2008

Vachana- ವಚನಗಳು


ದೇವರ ದಾಸಿಮಯ್ಯನವರು ರಚಿಸಿದ ವಚನಗಳು:

ಅಚ್ಚ ಶಿವಭಕ್ತಂಗೆ ಹೊತ್ತಾರೆ ಅಮವಾಸೆ
ಮಟಮಧ್ಯಾಹ್ನ ಸಂಕ್ರಾಂತಿ;
ಮತ್ತೆ ಅಸ್ತಮಾನ ಪೌರ್ಣಮಿ ಹುಣ್ಣಿಮೆ;
ಭಕ್ತನ ಮನೆಯ ಅಂಗಳವೆ ವಾರಣಾಸಿ ಕಾಣಾ!
ರಾಮನಾಥ ||

Wednesday, June 20, 2007

ವಚನಗಳು - Devara Dasimayya's Vachanas

ದೇವಾಂಗ ಜನಾಂಗದಲ್ಲಿ ಮೊಟ್ಟ ಮೊದಲು ಪ್ರಸಿದ್ಧರಾದವರು ದೇವರ ದಾಸಿಮಯ್ಯ.
ಸೀರೆ ನೇಯುವ ಕೆಲಸದಿಂದ ಜೀವನ ಸಾಗಿಸುತ್ತಿದ್ದ ಇವರು "ರಾಮನಾಥ "ಎನ್ನುವ ನಾಮಂಕಿತವನ್ನು ಕೊಟ್ಟು ಅನೇಕ ವಚನಗಳನ್ನು ರಚಿಸಿದ್ದಾರೆ.
ತುಂಬಾ ಉಪಯುಕ್ತ ಮತ್ತು ತಮ್ಮ ದಿನನಿತ್ಯದ ಜೀವನಕ್ಕೆ ಸಂಭಂದಿಸಿದ ವಿಷಯಗಳ ಬಗ್ಗೆಯೆ ರಚಿಸಿದ ದೇವರ ದಾಸಿಮಯ್ಯ ಅವರ ವಚನಗಳು ತುಂಬಾ ಸರಳವಾಗಿ ಮನೆಸೂರೆಗೊಳ್ಳುತ್ತವೆ.



ದೇವರ ದಾಸಿಮಯ್ಯನವರು ರಚಿಸಿದ ವಚನಗಳು:

ಶಿವಭಕ್ತರು ತಮ್ಮ ನಿಜ ಕೈಲಾಸಕ್ಕೆ ಹೋದರೆ
ಅವರರಸಿಯ ಪಾರ್ವತಿಯ ಸರಿ ಎಂದು ಕಾಣಬೇಕು
ಅಲ್ಲಿ ಅನುಸರಣೆಯ ಕೊಟ್ಟು ಬೆರೆಸಿ ಮಾತಾಡುವ ನರಕಿಗಳನೇನೆಂಬೆ
ರಾಮನಾಥ?
Related Posts Plugin for WordPress, Blogger...

Devara Dasimayya Blog Popular Posts

My Blog List

Facebook Followers